Wednesday, April 28, 2010

ಸೋಲಿನ ನಂತರವೂ...

ಮೊನ್ನೆ ಆರ್ದ್ರ ಮನಸ್ಸಿನ ವ್ಯಕ್ತಿಯೊಬ್ಬರು ತೀರಿ ಹೋದ ಅನಂತರದಲ್ಲಿ ಅವರ ಬಗ್ಗೆ ತಿಳಿದಿದ್ದವರೂ ತುಂಬಾ ಮರುಕ ಪಡುತ್ತಿದ್ದರು.ಎಲ್ಲವೂ ಇದ್ದಾಗ ಆತ ಎದ್ದು ಹೋದ ಯಾಕೆ? ಎಂಬುದು ತಿಳಿಯುತ್ತಿಲ್ಲಾ ಎಂಬುದು ಅವರ ಒಟ್ಟು ಮಾತಿನ ಸಾರಂಶವಾಗಿತ್ತು.
ನನಗಾಗ ತಲೆಗೆ ಬಂದದ್ದು, ಮನುಷ್ಯನಿಗೆ ಯಾವಾಗಲೂ ಇಲ್ಲವೂಗಳ ಬೇತಾಳದ ತರಹ ಬದುಕುತ್ತಲೇ ತನ್ನ ಜೀವನದ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿರುತ್ತಾನೆ ಎಂಬುದು. ಇದು ಎಷ್ಟು ನಿಜವೋ ಗೊತ್ತಿಲ್ಲ. ಅದರೆ, ಮನುಷ್ಯನ ನಸೀಬು ಖೋತಾ ಆದಾಗ ಆತ ಏನೆ ಯಶಸ್ಸುಗಳ ಮೆಟ್ಟಿಲೇರಿದ್ದರೂ ಅದು ಅವನ ಬದುಕಿನ ಖೋತಾ ಖಾತೆಯೆ ಎಂಬುದು ಸುಳ್ಳಲ್ಲ.
ಈ ಮಾತನ್ನು ನಾನು ಕೇವಲ ಉತ್ಪ್ರೇಕ್ಷೆಯಿಂದ ಹೇಳುತ್ತಿಲ್ಲ. ಸೋಲಿನ ನಂತರವೂ ನಾನು ಬದುಕಿದ್ದೇನೆ. ಮತ್ತೆ ಮತ್ತೆ ಸೋಲುತ್ತಿದ್ದೇನೆ. ಬಹುಶಃ ಗೆಲವು ಬಾರದೆ ಬದುಕು ಮುಗಿದು ಹೋಗಬಹುದು ಎಂಬ ಆತಂಕ ದಿನವೂ ನನ್ನನ್ನು ಕಾಡುತ್ತದೆ. ಸೋಲಿನ ಸಂಕಟಗಳ ತಲೆಬಿಸಿಯಲ್ಲಿ ಗೆಲವು ಹೇಗಿರುತ್ತದೆ ಎಂಬ ಕಲ್ಪನೆಯೇ ನನ್ನಿಂದ ಮರೆಯಾಗಿ ಹೋಗಿದೆ.
ನಾನು ಪತ್ರಕರ್ತನಾಗಿ ವೃತ್ತಿ ಆರಂಭಿಸಿದಾಗ ಆಗಿನ್ನು ಕಾಲೇಜು ಕಲಿಯುತ್ತಿದ್ದಾತ. ಆತ್ಮಹತ್ಯೆಯಂತಹ ಸುದ್ದಿಗಳನ್ನು ಬರೆಯುವಾಗ ಮನುಷ್ಯನಿಗೆ ಬದುಕುವುದಕ್ಕಾಗಿ ಎಷ್ಟೊಂದು ಅವಕಾಶಗಳಿದ್ದಾಗಲೂ ಇವರು ಆತ್ಮಹತ್ಯೆ ಮಾಡಿಕೊಳ್ಳುವುದೇಕೆ? ಎಂಬ ಪ್ರಶ್ನೆ ಎದುರಾಗುತ್ತಿತ್ತು. ಆತ್ಮಹತ್ಯೆ ಮಾಡಿಕೊಳ್ಳುವವರ ವರಸೆ ನನಗೆ ಪಾಪದ ಕೆಲಸವೆಂದು ಮುಂದಿರುವ ಸುಂದರ ಬದುಕನ್ನು ಕಟ್ಟಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡ ಕೈಲಾಗದವರು ಎಂದು ಭಾವಿಸುತ್ತಿದ್ದೆ.
ಮನಸ್ಸು ಮಾಗುತ್ತಾ..ಬದುಕು ಜಟಿಲವಾಗುತ್ತಾ(ಕೆಲವೊಮ್ಮೆ ಸ್ವಯಂಕೃತ ಅಪರಾಧದಿಂದ) ಬಂದಂತೆ ನನ್ನ ವೃತ್ತಿ ಜೀವನದಲ್ಲಿ ಅಂತಹ ಆತ್ಮಹತ್ಯೆ ಪ್ರಕರಣಗಳಿಗೆ ನನಗೆ ಗೊತ್ತಿಲ್ಲದಂತೆ ಹೊಸ ವಾಖ್ಯಾನ ನೀಡತೊಡಗಿದೆ.ವ್ಯಕ್ತಿಯೊಬ್ಬನ ಹತಾಶ ಸ್ಥಿತಿಯಲ್ಲಿ ಎಲ್ಲಿಯೂ ಆಸರೆ ದೊರೆಯದೆ ಹೋದಾಗ ಆತನ ಮನಸ್ಸು ಅನುಸರಿಸುವ ಕೊನೆಯ ಮಾರ್ಗ ಶಾಂತಿ ಅರ್ಥಾತ್ ಆತ್ಮಹತ್ಯೆ ಇರಬೇಕು ಎನಿಸಿತೊಡಗಿತು. ಏಕೆಂದರೆ ಅಂತಹ ಹತಾಶ ಸ್ಥಿತಿಗೆ ಹಲವು ಬಾರಿ ತಲುಪಿ ಈಗಲೂ ಬದುಕಿದ್ದೇನೆ ಎಂಬುದು ನನ್ನ ಇವತ್ತಿನ ಸಾಧನೆ.
ಇಷ್ಟು ದಿನಗಳ ಕಾಲವೂ ನಾನು ತಪ್ಪೆ ಮಾಡಿಲ್ಲವೆಂದಲ್ಲ. ಆದರೆ, ಆದೆಲ್ಲವೂ ನನ್ನದೇ ತಪ್ಪುಗಳಾಗಿರಬಹುದು. ಆದರೆ, ಅಂತಹ ಸಂದರ್ಭಗಳಿಗೆ ಯಾರನ್ನು ಹೊಣೆ ಮಾಡುವುದು. ಜೀವನದಲ್ಲಿ ಗೆಲುವ ಪಡೆಯುದಕ್ಕಾಗಿ ಹೋರಾಟ ಮಾಡುವುದು ಒಂದು ಸವಾಲು ಎಂಬುದು ಸರಿ. ಆದರೆ, ಕೊನೆಯವರೆಗೆ ಗೆಲವು ಅದೃಷ್ಟದ ಹಿಂದೆ ಅಲೆಯುತ್ತಿದೆ ಎಂಬರ್ಥದ ಸನ್ನಿವೇಶಗಳು ಎದುರಾದಾಗ ಎಂತವನೇ ಸರಿ ಹಣೆಬರಹ ಎಂಬ ಗೋಜಲು ಸಂತೆಯೊಳಗೆ ನಿರರ್ಥಕ ಭಾವುಕನಾಗುತ್ತಾನೆ. ಎಲ್ಲಿಯೂ ತನಗಿನ್ನು ಅಥವಾ ತನ್ನ ಸವಾಲುಗಳಿಗೆ ಪರಿಹಾರ ಸಿಗುವುದೇ ಇಲ್ಲ ಎಂಬಂತಹ ಪರಿಸ್ಥಿತಿ ಸೃಷ್ಟಿಯಾದಾಗ ಆತನಿಗೆ ಇಡೀ ಪ್ರಪಂಚವೆ ಶೂನ್ಯವಾಗಿ ಕಾಣತೊಡಗುತ್ತದೆ. ಇಂದು ಗೆಲವು ಎನ್ನುವುದು ಹಣದ ಅಳೆತಗೋಲಲ್ಲಿ ಅಳೆದು ಸುರಿಯುವ ಸಮಾಜದ ನಡುವೆ ಕೊಳ್ಳುವುದಕ್ಕಾಗಿ ಬದುಕು ಎಂಬ ವಾತವರಣವನ್ನು ನಿರ್ಮಾಣ ಮಾಡಿದೆ. ಮುಂದೆಯು ಅದರ ಪಾತ್ರ ಹಾಗೂ ಗಾತ್ರ ವಿಸ್ತಾರವಾಗತೊಡಗಿದಾಗ ಸಣ್ಣ ಗೆಲುವಿಗಾಗಿ ಹಪಾಹಪಿಸುವ ನನ್ನಂತಹ ಸೀಮಿತ ಪಾತ್ರದ ಮೀನುಗಳು ದೊಡ್ಡ ತಿಮ್ಮಿಂಗಿಲ ಆಹಾರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಉಳ್ಳವರು ಮತ್ತು ಇಲ್ಲದವರ ನಡುವೆ ನಾವು ಮಧ್ಯಂತರಿಗಳಾಗಿ ಜೀವನವನ್ನು ಸೋಲಿನ ಹುಟ್ಟಿನಲ್ಲಿಯೇ ಮುಗಿಸಿಬಿಡುವ ಆತಂಕದಲ್ಲಿರುತ್ತೇವೆ. ನನ್ನ ಸೋಲಿನ ಸರಣಿ ಎಲ್ಲೇ ಮೀರಿ ಬದುಕುವ ಬಗ್ಗೆ ಜಿಗುಪ್ಸೆ ಬರಿಸಿದೆ. ’ಉಸಿರುಕಟ್ಟಿಸುವ ವಾತವರಣ’ ಎಂದೆಲ್ಲಾ ಪದಗಳನ್ನು ಸುದ್ದಿ ಬರೆಯುವಲ್ಲಿ ಉಪಯೋಗಿಸುವಾಗ ಅದೊಂದು ಯಾಂತ್ರಿಕವಾದ ಪದ ಎನ್ನದೇ ನನ್ನದೇ ಬುದಕಿನ ಪದಗಳಾಗಿ ರೂಪಾಂತರವಾಗುತ್ತದೆ.
ದೇವರು, ಭವಿಷ್ಯ, ಜೋತಿಷ್ಯ ಎಂಬ ಶುಷ್ಕ ಭ್ರಮೆಗಳನ್ನು ದೂರವಿಟ್ಟ ಮನುಷ್ಯನು ಇಂತಹ ಸಂದರ್ಭದಲ್ಲಿ ತನಗೆ ಗೊತ್ತಿಲ್ಲದ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಅವುಗಳ ಮೊರೆ ಹೋಗುತ್ತಾನೆ. ಬಹುಶಃ ಕೆಲವರಿಗೆ ಇದೆಲ್ಲವೂ ತಮಾಷೆಯಾಗಿಯೂ,ಮೂರ್ಖತನದ ಕೆಲಸದಂತೆಯೂ ಕಾಣಬಹುದು. ಆದರೆ, ತನಗಿನ್ನೂ ಇಲ್ಲಿ ಬದುಕುವ ಸ್ಥಿತಿಗೆ ಯಾವುದೇ ಆಧಾರವೇ ಇಲ್ಲ ಎಂದು ನಿರ್ಧಾರ ಮಾಡಿದ ವ್ಯಕ್ತಿಯ ಕೊನೆಯ ಆಯ್ಕೆ ಆದೇ ಆಗಿರುತ್ತದೆ. ಅದರಲ್ಲಿ ಆತನಿಗೆ ಯಾವುದೇ ಸಿದ್ಧಾಂತದ ಹೊರತಾದ ನೆಮ್ಮದಿ ಅಥವಾ ಗೆಲವಿನ ಬದುಕನ್ನು ಕಟ್ಟಿಕೊಳ್ಳುವ ಆತುರವಿರುತ್ತದೆ.
ಇದೆಲ್ಲಾವೂ ನನ್ನದೇ ವೈಯಕ್ತಿಕ ಅಭಿಪ್ರಾಯವೂ ಹೌದು. ಸೋಲು, ಸಾಲ, ಜಗಳ, ದ್ರೋಹ,ಕಾಲೆಳೆಯುವ ಎಲ್ಲ ಜಂಜಾಟದ ಜನರ ನಡುವೆ ಹಾದು ಬಂದಿದ್ದೇನೆ. ಸೋತ ವ್ಯಕ್ತಿಯನ್ನು ಸಾಂತ್ವನಗೊಳಿಸುವ ಬದಲು ಆತನನ್ನು ತಮ್ಮ ತಮಾಷೆಗಾಗಿ ಬಳಸಿಕೊಳ್ಳುವ ಜನರ ಹತ್ತಿರವೂ ಬದುಕಿದ್ದೇನೆ. ಕೊನೆಯದಾಗಿ ಬೆಟ್ಟದಷ್ಟು ಸೋಲುಗಳ ನಡುವೆಯೂ ಪುಟ್ಟಪುಟ್ಟ ನಮ್ಮ ಹೆಣ್ಣು ಮಕ್ಕಳ ನಗುವನ್ನು ನೋಡಿ ದಿನವೂ ಗೆಲ್ಲಲು ಎದ್ದು ಹೋರಡುತ್ತೇನೆ.ಅವರಿಗಾಗಿ ನಾನು ಏನಾದರೂ, ಹೇಗಾದರೂ, ಬದುಕಿನ ನೊಗವನ್ನು ಮುನ್ನೆಡಸಬೇಕೆಂದು ಯೋಚಿಸುತ್ತೇನೆ. ಮತ್ತೆ ಸೋಲು ಕೊನೆಯ ಸಾಲಿನಲ್ಲಿ ನನ್ನ ಬರುವಿಕೆಗಾಗಿ ಕಾದು ನಿಂತಿರುತ್ತದೆ. ನನ್ನ ಮಕ್ಕಳ ನಗುವಿನ ಭರವಸೆ ಆ ಸೋಲಿನ ಕಠೋರತೆಯ ಮುಂದೆ ಪೇವಲವಾಗಿ ಕಾಣುತ್ತದೆ.
ಮುಂದೆ ಯಾವುದೇ ತಿರುವಿನಲ್ಲಿ ಗೆಲವು ದಕ್ಕದೇ ಹೋದರೆ ಏನು ಮಾಡುವುದು..? ಗೊತ್ತಿಲ್ಲ....