ಹುಟ್ಟಿನಿಂದ ಮಂತ್ರದಲ್ಲೆ
ಬೆಳೆದ
ಮಿರುಗುವ
ನನ್ನ ಮೈಗೆ
ಅವನೊಬ್ಬ ಬೇಕಾಗಿದ್ದ..
ಅವನೊಬ್ಬನೇ ಬೇಕಾಗಿದ್ದ..!
ಅವನದೋ
ಮತ್ತೆ ಮತ್ತೆ ಕಾಡುವ
ಮಣ್ಣಿನ ವಾಸನೆ..!
ಊರು ಹೊಡೆದ ಮಂತ್ರಗಳು
ನನ್ನೊಳಗಿನ ಹೆಣ್ತನಕ್ಕೆ
ಜೀವಕೊಡಲಾರವು ಅನ್ನಿಸಿದಾಗಲೆಲ್ಲಾ
ಅವನ ಕಣ್ಣು ನನ್ನ ಕನಸಾಗುತ್ತಿತ್ತು.
ಅವನೊಳಗಿನ ಬೆವರು
ನನ್ನ ಮೈಯೊಳಕ್ಕೆ ಇಳಿದರೆ..
ನಾನು ನಿಜವಾಗಿಯೂ
ಹೆಣ್ಣಾಗುತ್ತಿದ್ದೆ...
ಅಮ್ಮನ ಒಡಲಿನಿಂದ ಬಂದ
ಉಷಾಳಂತೆ..!
ನಾನು ತಪ್ಪೇ ಮಾಡಲಿಲ್ಲ..!?
ಮನುಷ್ಯರಾಗಲೂ ಬಿಡದ
ನಮ್ಮೊಳಗಿನ
ಮಂತ್ರ, ತಂತ್ರ,
ವೇದ, ಪುರಾಣಗಳಿಗೆ
ಲಜ್ಜೆಗಳಿರಲಿಲ್ಲ..ಅದು ಗೊತ್ತೂ ಇರಲಿಲ್ಲ..
ಅಮ್ಮನ ಮೌನ
ಅಪ್ಪನ ಮಂತ್ರದೊಳಗೆ
ಕಳೆದು ಹೋಗುತ್ತಲೇ
ನಾನು ರುದ್ರನ ಕಸುವಿಗೆ
ಕೂಸಾಗಿದ್ದೆ..
ಅವನ ಹಟ್ಟಿಯೊಳಗೆ
ನಾನು ಮತ್ತೆ ಮತ್ತೆ ಹೆಣ್ಣಾಗಿದ್ದೆ..!
ಅವನು ಶರಣನಾದ
ನನ್ನ ರುದ್ರನಾಗಲಿಲ್ಲ..
ಕಸುವಿಗೆ ಕುಲಾವಿ ಹೊಲೆಸಲು
ಹಾತೊರೆದ
ನಮ್ಮ ಪ್ರೇಮದಾಚೆ
ಬಸವಣ್ಣನ ಶರಣತನ
ಅಪ್ಪನ ಮಂತ್ರಗಳು
ನನ್ನ ರುದ್ರನನ್ನು ಕೊಂದು ಹಾಕಿದವು..
ಮತ್ತೆ ನಾನೀಗ
ಬ್ರಾಹ್ಮಣರ ವಿಧುವೆ...
ಅಲ್ಲಲ್ಲ
ಅವರ ತಂತ್ರಗಳಿಗೆ
ತಲೆ ಕೊಟ್ಟ
ರುದ್ರನ ಪತ್ನಿ...!
ನಮ್ಮ ಶಂಕರ ನ ನೆನಪೇ ಸ್ಮಾರಕ!
3 years ago
No comments:
Post a Comment