Monday, June 22, 2009

ಮಳೆಯಲಿ


ಛೇ
ಮಳೆ ಬರುತ್ತಿದೆ
ನೆಂದ ನಾನು ನಿಮಗೆ
ಈಗೇಕೆ ನೆನಪಾದೆ.
ಅವನು ಕಾಯುತ್ತಿದ್ದಾನೆಂದು
ಅವಸರವಾಗಿ ಹಾಗೆ ಬಂದೆ
ಮೊದಲ ಮಳೆ
ಮೈಯಲ್ಲ ಒದ್ದೆ.

ಹೀಗೆಲ್ಲಾ ಫೋಟೊ ತೆಗೆಯಬೇಡಿ
ಒದ್ದೆಯ ಮುಖದಲ್ಲಿ
ನಾನು ಮುದ್ದೆಯಾಗಿದ್ದೇನೆ
ಬಿದ್ದ ಮಳೆಯಹನಿಯು
ಒರೆಸಿಲ್ಲ.
ನಾಳೆ ಬಂದರೆ ಆಗದೆ..
ಕೂದಲೆಲ್ಲಾ ನೋಡಿ
ಹರಡಿ ಆಕಾಶ ನೋಡುತ್ತಿದೆ..
ಅಲ್ಲಿಗೆ ತಲುಪಲು ಇನ್ನೆಷ್ಟು ಹೊತ್ತು ಬೇಕೋ..?
ಅವನು ಮಳೆಯಲಿ ನೆನೆದು ನೆನೆಯುತ್ತಿರುತ್ತಾನೆ
ನಾನು ಮಳೆಯಲ್ಲಿ ನೆಂದಿರಬಹುದೆಂದು
ಈಗ ಹೋಗಲೇ...!!

Tuesday, June 9, 2009

ಕೂಗಿ ಹೇಳು..!

ನಾನು ಬರೆಯುವ ಕವನ
ಹೇಂಗಿರಬೇಕು..?
ಕೊನೆಯ ಕೇರಿ ಹುಡುಗನ ಪ್ರಶ್ನೆ.

ಮೂರ್ಖ,
ಜನಿವಾರವಿದ್ದರೇ
ಸಾಕು ಕವನ ಏಕೆ ಬರೆಯುತ್ತೀಯಾ !
ನೀನು ಬರೆದಿದ್ದೇಲ್ಲಾ ಕವನವೇ..!?
ನೀನು ಮಾತನಾಡಿದ್ದೆಲ್ಲಾ ಸಿದ್ದಾಂತವೇ..!
ನಿನ್ನ ಹೆಸರಿನ ಮುಂದೆ
ಮೇಲ್ಜಾತಿಯ
ನಾಮ ಸೂಚಕ ಒಂದಿದ್ದರೇ ಸಾಕು
ನಿನಗೆ ಹೋದಡೆಯಲ್ಲಾ ಕೆಂಪುಹಾಸು
ಇವ ನಮ್ಮವ ಇವ ನಮ್ಮವ
ಎಂದೆಲ್ಲಾ ಬಿಗಿದಪ್ಪುತ್ತದೆ
ನಿಮ್ಮ ಜನರನ್ನೇ ತುಳಿದ ಅವರ ಗುಂಪು..!

ಕೇಳೋ ಹುಡುಗ
ನಿಮ್ಮ ತಲೆಮಾರು ಹೊಸೆದ
ಹಾಡುಗಳನ್ನೆ ನಮ್ಮವೆಂದು
ಹಾಡಿ ಬೀಗಿದ ಮಂದಿ ಅವರು,
ಲಜ್ಜೆ ಬಿಟ್ಟು, ಜಾತಿ ಇಟ್ಟುಕೊಂಡು
ಜನಿವಾರಕಷ್ಟೇ ಜಾಗವಿಲ್ಲಿ
ಎಂದು ಹೇಳುತ್ತಲೇ
ದುಡಿಯುವ ನಿಮ್ಮ ಮಂದಿಗೊಂದು
ಕೇರಿ ಮಾಡಿದರು.
ಮೈಕೈ ನೋಯಿಸಿಕೊಳ್ಳದೆ
ಮಡಿ ಎಂದು
ಕಪ್ಪು ಜನರ ಕೆಂಪು ರಕ್ತ
ಗಟಗಟನೆ ಕುಡಿದು
ತಪ್ಪೆಲ್ಲಾ ನಿಮ್ಮ ಮೂತಿಗೆ ಒರೆಸಿದರು.

ಈಗೇನು ಮಾಡುತ್ತಿದ್ದಾರೆ..!
ಕಂಡಲ್ಲಿ..ಸಿಕ್ಕಲ್ಲಿ..ಬರೆದಲ್ಲಿ..ಬೆಳೆದಲ್ಲಿ
ನಿಮ್ಮನ್ನು ತುಳಿಯುವ ಸಂಗತಿ ಜಾರಿಯಲ್ಲಿದೆ!?

ಈಗಲಾರದೂ ಗಟ್ಟಿಯಾಗಿ
ಓದಿ ಹೇಳು
ನೀವು ಕದ್ದ, ಕಸಿದುಕೊಂಡ
ಹಾಡುಗಳೆಲ್ಲಾ ನಮ್ಮವೆಂದು
ನಮ್ಮ ಬೆವರಿನ ನಂತರ ಹುಟ್ಟಿದ
ಅಂತಃಕರಣದ ರಾಗಗಳೆಂದು..
ನಮಗೆ ನಾವೇ
ಕವಿಗಳೇಂದು..!?

-ಹೆಗ್ಗೆರೆ ರೇಣುಕಾರಾಧ್ಯ
ಮೈಸೂರು.

Friday, June 5, 2009

ಮಾಯಾ

ಕವಿತೆ ಬರೆಯುವುದು ಬಿಟ್ಟು
ಬೇರೆನೂ ಗೊತ್ತಿಲ್ಲದ
ಹೆಡ್ಡೂ ಕಣೋ..ನೀನು..
ಹೀಗೆ..
ಒಮ್ಮೆ ಕಣ್ಣರಳಿಸಿ
ನಕ್ಕು ಹೋದವಳ
ವಿಳಾಸ ಗೊತ್ತಿಲ್ಲ
ಅವಳು ಗೊತ್ತಿದ್ದರೇ ಹುಡುಕಿ ಕೊಡಿ..!

ನನ್ನೂರಿನ ಬರದ ಬಾಯರಿಕೆಗೆ
ಬೆನ್ನ ತಿರುಗಿಸಿ
ಬೆಂದಕಾಳೂರಿಗೆ ಹೋದವಳು
ಆದೇನು ಮಾಯೆಯೂ
ಅಲ್ಲಿಂದಲೂ ಅವಳು
"ಮಾಯಾ’
ಅವಳ ಹೆಸರೇ ಹಾಗೆ...!

ಅವರು ಬಿಟ್ಟು ಹೋದ ಭಾಷೆಗೆ
ಇವಳು ಅಧಿಕೃತ ಹಕ್ಕುದಾರಳಂತೆ
ನನ್ನೂರಿನ ಹೈಕಳು ಕಂಗಾಲು
ಪುರದ ಬಾಗಿಲ್ಲಲೇ
ಅವಳದೇ ಚರ್ಚೆ..?!
ಪಕ್ಕದಲ್ಲೆ ಇರುವ
ಸಿಂಗಾಪುರದಲ್ಲಿ ಅವಳದೇ ಧ್ಯಾನ
ಎಲ್ಲಿರಬಹುದೋ.? ಹೇಂಗಿರಬಹುದೋ..?

ಫರಂಗಿಯವರನ್ನು ಮದುವೆಯಾದರೇ?
ಅವರಮ್ಮನ ಚಿಂತೆ.
ವಯಸ್ಸು ಚಿಕ್ಕದು, ತುಂಬಿದ ಮೈಕಟ್ಟು
ನೀಳ ಕಣ್ಣು, ಗುಂಗರ ಕೂದಲು
ಬಾಯಿತುಂಬಿ ಮಾತನಾಡುವ ಬುದ್ದಿವಂತೆ
ಈ ನಮ್ಮೂರಿನ "ಮಾಯಾಂಗನೆ’
ಕಾಣೆಯಾಗಿದ್ದಾಳೆ..
ಸಿಕ್ಕಿದರೇ ಹುಡುಕಿಕೊಡಿ...!
ಪೇಪರ್‌ನಲ್ಲಿ ಬಂದ ಸಣ್ಣ ಸುದ್ದಿಯೇ
ನಮ್ಮೂರಿಗೆ ಈಗ ಹೈಲೈಟು...
ವಿಳಾಸ ಗೊತ್ತಿಲ್ಲ
ಅವಳು ಗೊತ್ತಿದ್ದರೇ ಹುಡುಕಿ ಕೊಡಿ..!

-ಹೆಗ್ಗೆರೆ ರೇಣುಕಾರಾಧ್ಯ
ಮೈಸೂರು