Thursday, February 5, 2009

ಕಾಲ ಮತ್ತೊಮ್ಮೆ ನಮಗಾಗಿ ಬಂತು..


ಅಣ್ಣಾ ಒಂದು ನೂರು ರೂಪಾಯಿ ಸಾಲ ಬೇಕಾಗಿತ್ತುಅವನ ಧ್ವನಿ ತೀರಾ ಅಸಹಾಯಕ ಸ್ಥಿತಿಯಲ್ಲಿ ಇತ್ತು. ಸಾಲ ಕೇಳುತ್ತಿರುವುದು ತೀರಾ ಪರಿಚಯದ ಗೆಳಯನಿಗೆ. ಆದರೆ, ಸಂದರ್ಭ ಮಾತ್ರ ಕೆಟ್ಟದಾಗಿತ್ತು. ಅಷ್ಟಿಲ್ಲ ಇಷ್ಟಿದೆ ತಗೋ.. ಕೈಗೆ ಏನೋ ಆಗಿದೆ ಅನುಕಂಪದಿಂದಲೇ ಕೇಳಿದ ಗೆಳೆಯ. ದಯನೀಯ ಮನಸ್ಥಿತಿಯಲ್ಲಿದ್ದ ಈತ ಕೊಟ್ಟಿದ್ದನ್ನು ಹಿಡಿಮನಸ್ಸಿನೊಂದಿಗೆ ಜೇಬಿಗಿಳಿಸಿ ಹೌದು...ನಿನ್ನೆ ಬಿದ್ದಿದ್ದೆ ಎಂದೆ, ಉತ್ತರವೇ ನೀರಸ.

ಗೆಳೆಯನ ಕಚೇರಿಯ ಹೊರಗೆ ಇಟ್ಟಿದ್ದ ನೀರನ್ನು ಕುಡಿಯಬಹುದೇ ಎಂದರೆ, ನನ್ನನು ಕೇಳಬೇಕು ಎನ್ನುವ ಸ್ಥಿತಿಯಲ್ಲಿ ನಿಂತು ನೋಡುತ್ತಿದ್ದ ಸೆಕ್ಯುರಿಟಿಯವಾ..ನೀರು ಗಂಟಲಿಗೆ ಇಳಿಯುವ ಮುನ್ನವೇ ಹಣ ಕೊಟ್ಟು ಒಳ ಹೋದ ಗೆಳೆಯನೊಂದಿಗೆ ಕೆಲವರು ಜೋರಾಗಿ ನಕ್ಕು ಮಾತನಾಡುವುದು ಬೇಡವೆಂದರೂ ಈತನ ಕಿವಿಗೆ ಬಿತ್ತು.

ಆಗ್ಲೆ ಹೊಸ ನಾಟಕ ಮಾಡ್ಕೊಂಡು ಬಂದ ಹಣ ಕೇಳಿದ್ನಾ..? ಬಲೇ ಕಲಾವಿದ ಕಣಯ್ಯ ಅವ್ನು ಮತ್ತೆ ಜೋರಾಗಿ ನಕ್ಕರು.ವಿಚಿತ್ರವೆಂದರೆ ಆದೇ ಕಚೇರಿಯಲ್ಲಿ ನಗುವವರಿಗಿಂತಲೂ ಮೊದಲು ದುಡಿದು ಹೊರಬಂದವನು ಈತ. ಆಗ ಹೊಸದಾಗಿ ಬಂದು ಅಮಾಯಕರಂತೆ ನಿಂತು ನೋಡುತ್ತಿದ್ದ ಅವರಿಗೆಲ್ಲ ಟೀ ಕುಡಿಸಿ, ಇದೆಲ್ಲಾ ಬೆಟ್ಟವಲ್ಲ, ಮಂಜಿನಂತೆ ಕರಗಿ ಹೋಗುವ ಕರಗತ ವಿದ್ಯೆ ಎಂದು ಎಷ್ಟೋ ಸಂಜೆಗಳಲ್ಲಿ ಹೇಳಿಕೊಟ್ಟಿದ್ದಾತ.

ಮಾತುಗಳು ಹೃದಯಕ್ಕೆ ಚುಚ್ಚಿದಂತಾಯಿತು. ಗಂಟಲಿಗೆ ಇಳಿದ ನೀರು ಎದೆಯಾಳದೆಲ್ಲೆಲ್ಲೋ ಭಾರವಾದಂತೆ ದಡದಡನೇ ಅಲ್ಲಿಂದ ಆತ ಹೊರಬಿದ್ದ...

****

ಹಾಗಾದರೆ ಇಂತಹದೊಂದು ಸಂದರ್ಭಕ್ಕೆ ಯಾರನ್ನ ದೂಷಣೆ ಮಾಡುವುದು?,ಇದು ಆತನ ಸೋಲೋ ಅಥವಾ ಆತನ ಹಣೆಬರಹವೇ..?ಬೇಕಾದವರು ಬೇಕಾದ್ದಂಗೆ ಹೇಳಲಿ, ಆದರೆ, ಮೇಲಿನ ಘಟನೆಯ ರೀತಿಯಲ್ಲಿಯೇ ಬಹುತೇಕರು ಅವಮಾನಕರ ಪ್ರಸಂಗವನ್ನು ಜೀವಮಾನದಲ್ಲಿ ಒಮ್ಮೆಯಾದರೂ ಅನುಭವಿಸಿರುತ್ತಾರೆ. ಅದೊಂದು ಕಾಲಘಟ್ಟವೇ ಇರಬೇಕು.ಸೋತವರನ್ನು ಯಾರೂ ಕಣ್ಣೆತ್ತಿಯೂ ನೋಡುವುದಿಲ್ಲ. ಹಾಗೆಂದು ಸೋತವರೆಲ್ಲಾ ಸದಾ ಸೋತೇ ಇರುವುದಿಲ್ಲ. ಆದರೆ ಆ ಟೈಮ್ ಮನುಷ್ಯನನ್ನು ಎಂತ ದುಸ್ಥಿತಿಯಲ್ಲಿ ನೋಡುತ್ತದೆ ಎಂದರೆ, ಅಲ್ಲಿಯವರೆಗೆ ಆತನ ಪ್ರತಿಭೆ, ಯಶಸ್ಸು, ಒಳ್ಳೆಯತನ, ಧೈರ್ಯ, ಪ್ರಾಮಾಣಿಕತೆ ಎಲ್ಲವೂ ಒಂದೇ ಇಡೀ ಗಂಟಿಗೆ ಮಾರವಾಡಿಯ ಅಂಗಡಿಯಲ್ಲಿ ಅಡವಿಟ್ಟಂತೆ ಅವಿತುಕೊಂಡಿರುತ್ತವೆ. ಅವನ್ನು ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಆತ ಜೀವನದ ಬಹುತೇಕ ವರ್ಷಗಳೇ ಸಾಲಗಾರ ಎನಿಸಿಕೊಂಡು ಅವರಿವರಿಂದ ಬಂದ ಕಣ್ರಯ್ಯ ಎಂದು ಬೇಕಾರ್ ಎಂಬ ಪಟ್ಟವನ್ನು ಪಡೆದುಕೊಳ್ಳುವ ದುರಂತ ಪರ್ವ.

ಇಂತಹ ಬದುಕನ್ನು ಎದುರಿಸಿದ ಯಾರಿಗಾದರೂ ಒಮ್ಮೆ ಅಪ್ತವಾಗಿ ಅದರ ನೆನಪು ಮಾಡಿ ನೋಡಿ, ಒಂದು ಕ್ಷಣ ಅವಕ್ಕಾದವರಂತೆ ಬೆಚ್ಚಿ ಕುಳಿತು ಆನಂತರ ವಿಷಾದದ ನಗೆ ಅವರ ಮುಖದ ಮೇಲೆ ತೇಲಿ ಹೋಗುತ್ತದೆ., ಆದರೆ, ಅದನ್ನು ನಿಮ್ಮೊಂದಿಗೆ ತೀರಾ ಹಂಚಿಕೊಳ್ಳಲಾರರು. ಏಕೆಂದರೆ ಅದು ಅವರ ಪ್ರಕಟವಾಗದ ಬದುಕಿನ ಪುಟಗಳು. ಮತ್ತೊಮ್ಮೆ ನೆನಸಿಕೊಂಡರೆ ಎಲ್ಲಿ ಆತುಕೊಳ್ಳೋತ್ತದೆಯೋ ಎಂಬ ಅಂಜಿಕೆ.

***

ಎಂತಹ ಸೋಲಾದರೂ ಮನುಷ್ಯ ತಡೆದುಕೊಳ್ಳಬಲ್ಲ. ಆದರೆ, ತನ್ನ ಜೀವನಸ್ಥಿತಿಯಲ್ಲಿ ಆರಂಭವಾಗುವ ಸೋಲಿನ ಸರಮಾಲೆಗಳನ್ನು ಭರಿಸುವ ಶಕ್ತಿ ಮಾತ್ರ ಆತನಿಗೆ ಇರುವುದಿಲ್ಲ. ಒಮ್ಮೆ ನಸೀಬು ಕೆಟ್ಟರೆ, ಬಂಗ್ಲೆಯಲ್ಲಿ ಇದ್ದಾತ ಪುಟಪಾತ್ ಎನ್ನುವ ಮಾತನ್ನು ಆಗಾಗ ಕೇಳುತ್ತಲೇ ಇರುತ್ತೀರಿ. ಈ ಸೋಲು ಒಂದು ತರಹಾ ಹಾಗೆ. ಎ.ಸಿ.ರೂಮಗಳಲ್ಲಿ ಕೂತು ಹತ್ತಾರು ಮಂದಿಗೆ ಕೆಲಸ ಹಂಚುತ್ತಿದ್ದವ ಅಥವಾ ತನ್ನದೆ ಸ್ವಂತ ವ್ಯಾಪಾರದಲ್ಲಿ ನೆಮ್ಮದಿ ಕಂಡು ಒಂದಿಬ್ಬರು ಹುಡುಗರಿಗೆ ಮನತುಂಬವಷ್ಟು ಸಂಬಳ ಕೊಡುತ್ತಿದ್ದವ, ಬೀದಿ ಬಂದರೆ ಮುಗೀತು. ಅವನ ಅಲ್ಲಿಯವರೆಗಿನ ಶ್ರಮ,ಪ್ರತಿಭೆ,ಚಿಂತನಾ ಶಕ್ತಿ ಎಲ್ಲದಕ್ಕಿಂತ ದಿನವೂ ದಣಿವರಿಯದೆ ದುಡಿದು ನಾಳೀನ ಕನಸುಗಳ ಬುತ್ತಿ ಕಟ್ಟುವ ಪ್ರಕ್ರಿಯೆಗಳಿಗೆ ಶನಿ ಪ್ರವೇಶ ಎಂಬುದು ಖಾಯಂ. ಅಲ್ಲಿಂದ ಆತನ ಪ್ರತಿಭೆ ಬಡ್ಡಿಗೆ ಸಾಲ ನೀಡುವವನ ಮುಂದೆ ಮಕಾಡೆ ಮಲಗಿಕೊಂಡು ಬಿಟ್ಟಿರುತ್ತದೆ. ಸೋಲು ಆರಂಭವಾಗುವುದೇ ಅಲ್ಲಿಂದ, ಬಡ್ಡಿಗೆ ತಂದ ಸಾಲ ಮೊದಲು ಅವನ ವೃತ್ತಿ ಮತ್ತು ಪ್ರವ್ಲತ್ತಿಯನ್ನು ಮುಳುಗಿಸುತ್ತದೆ, ಆನಂತರ ನಿಧಾನವಾಗಿ ಮನೆಯಲ್ಲಿನ ನಂಬಿಕೆಯ ಗೋಡೆಗಳನ್ನು ಕೆಡವಲು ಆರಂಭಿಸುತ್ತದೆ. ಅಲ್ಲಿಗೆ ಆತ ಗಡ್ಡಧಾರಿ. ನಗುವುದನ್ನು ಮರೆತುಬಿಟ್ಟಿರುತ್ತಾನೆ. ಏಕೆಂದರೆ ಸಾಲ ಕೊಟ್ಟಾತನ ವಿಕಟನಗು ನಿದ್ದೆಯನ್ನೂ ಕದ್ದಿರುತ್ತದೆ.ಇನ್ನು ಮನೆಯವರು ಬಿಡಿ, ಸ್ವಂತ ಹೆಂಡತಿ ಆತನನ್ನು ಕಂಡರೆ ಉದಾಸೀನ ಮಾಡುಲು ಆರಂಭಿಸುತ್ತಾಳೆ. ಗೆಳೆಯರು ತಪ್ಪಿಸಿಕೊಂಡು ಓಡಾಡುತ್ತಾರೆ. ಇನ್ನೂ ಕೆಲವರು ಬಿಟ್ಟಿ ಸಲಹೆಗಳನ್ನು ಕೊಟ್ಟು ಅನುಕಂಪ ತೋರಿಸುತ್ತಲೇ ಎಲ್ಲರ ಮುಂದೆ ಕಾಲೇಳೆಯಲು ಆರಂಭಿಸುತ್ತಾರೆ. ಕೊಟ್ಟ ಸಾಲ ತೀರಿಸಲು ಇನ್ನೊಂದು ಸಾಲ..ಹೀಗೆ ಸಾಲದ ಚಕ್ರವ್ಯೂಹದಲ್ಲಿ ಸಿಲುಕಿಕೊಂಡವನಿಗೆ ಈ ಹಿಂದೆ ಕೆಲಸಕೊಡಲು ತಾ ಮುಂದೆ ನಾ ಮುಂದು ಪೈಪೋಟಿ ನಡೆಸುತ್ತಿದ್ದ ಮಂದಿ ಈಗ ಎಲ್ಲರ ಮುಂದೆಯೇ ಅವನ ಪ್ರಾಮಾಣಿಕತೆ, ಪ್ರಯತ್ನಶೀಲತೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ.

ಇಲ್ಲದ ನೆವದೊಂದಿಗೆ ಎಲ್ಲಿ ಆತನ ದುರಾದೃಷ್ಟ ತಮ್ಮನ್ನೂ ನುಂಗಿಬಿಡುತ್ತದಯೋ ಎಂಬಂತೆ ಸಾಗಹಾಕುವುದನ್ನೆ ಕಾದು ನೋಡುತ್ತಾರೆ. ಅಲ್ಲಿಗೆ ಆತನ ಮಾನಸಿಕ ಧೈರ್ಯ ಫಿನಿಷ್. ಇದಕ್ಕೆ ಸಾಥ್ ಎಂಬಂತೆ ಮನೆಯಲ್ಲಿ ಹೆಂಡತಿಯೂ ಆದೇ ಸ್ಥಿತಿಯಲ್ಲಿ ಆತನನ್ನು ಪ್ರಶ್ನೆ ಮಾಡುತ್ತಾ ಹೋದರೆ, ಆತ ನಿಜವಾಗಿಯೂ ಬೇಕಾರ್.

****

ಇದು ಮುಗಿಯದ ಘಟ್ಟವಲ್ಲ. ಎಂದೋ ಒಂದು ದಿನ ಎಲ್ಲವೂ ಮುಗಿದು ನಿಧಾನವಾಗಿ ಆತ ಆ ಪರ್ವದಿಂದ ಹೊರಬರುತ್ತಾನೆ. ಮತ್ತೆ ಮುಕ್ಕಾಗದೆ ಉಳಿಸಿಕೊಂಡ ಕಲಿತ ವಿದ್ಯೆಯನ್ನು ಉಪಯೋಗಿಸಿಯೇ ಮೇಲೆರುತ್ತಾನೆ. ಆಗ ಸ್ನೇಹಿತರಲ್ಲಾ ಸಕ್ಕರೆಗೆ ಇರುವೆ ಮುಕ್ಕುವಂತೆ. ಆದರೆ, ಅಷ್ಟು ದಿನಗಳ ಕಾಲ ಅನುಭವಿಸಿದ ಯಾತನೆ ಮುಂದಿನ ಏಳು ಜನ್ಮಕ್ಕಾಗುವಷ್ಟು ಸಾಕಾಗಿರುತ್ತದೆ. ಕೆಲವರು ಅದನ್ನು ಎದುರಿಸಲಾಗದೆ ಸಾವಿನ ದಾರಿಯನ್ನೆ ಹಿಡಿದಿರುತ್ತಾರೆ. ಬಹಳಷ್ಟು ಮಂದಿ ಕಟ್ಟಿಕೊಂಡ ಬದುಕಿನ ಜಂಜಾಟ ಅನಾಥವಾಗುತ್ತದೆಯಲ್ಲಾ ಎಂಬ ಕಾರಣಕ್ಕೆ ಹೆಂಡತಿ,ಮಕ್ಕಳು,ಸಮಾಜ ಹೀಗೆ ನೂರಾರು ಜಟಿಲ ಸಂಬಂಧದೊಳಕ್ಕೆ ಬಂಧಿ. ಕಂಡರೆ ಕ್ಯಾಕರಿಸುವ ಸಂಬಂಧಿಕರನ್ನು ಸಹಿಸಿಕೊಂಡು ಸೋಲನ್ನು ಎದುರಿಸಲು ಹೊರಟವನಿಗೆ ಒಬ್ಬನೇ ಒಬ್ಬ ಸಾಂತ್ವನ ಅಥವಾ ಸಾಥ್ ಹೇಳುವುದಿಲ್ಲ. ಈಗಿನ ಕಾಲದಲ್ಲಿ ಹೇಳಲು ಸಾಧ್ಯವೇ ಇಲ್ಲ ಬಿಡಿ. ಬಿದ್ದಾತನ ಬಳಿ ದುಡಿಸಿಕೊಳ್ಳುವುದು ಹೇಗೆ ಎಂಬುದು ಕೆಲವರಿಗೆ ಕಲಿಸದೇ ಬಂದ ವಿದ್ಯೆ. ಇನ್ನೂ ಕೆಲವರು ನಾವು ಸೋಲುವುದೇ ಇಲ್ಲ ಎಂಬರ್ಥದಲ್ಲಿ ಹೀಗೆ ನೆಲ ಹಿಡಿದವರ ಜುಟ್ಟು ಹಿಡಿದು ಜಗ್ಗಾಡುವುದನ್ನು ಎದೆಯೊಳಗೆ ಇಟ್ಟುಕೊಂಡಿರುತ್ತಾರೆ. ಆದರೆ, ಈಗಿನ ವೇಗದ ಜಗತ್ತಿನಲ್ಲಿ ಯಾರೊಬ್ಬರು ಸೋತು ಕೂತವನಿಗೆ ಒಂದೊಳ್ಳೆ ಸಲಹೆ ನೀಡಿ ಜೊತೆಗೆ ಕರೆದು ಕೆಲಸ ಮಾಡುವ ಮನಸ್ಸು ಕಳೆದುಕೊಂಡಿರುವುದು ನೋಡಿದರೆ ವೇದನೆಯಾಗುತ್ತದೆ. ಸೋಲು ಎನ್ನುವುದು ಜಾಗತೀಕರಣದಿಂದಲೋ ಅಥವಾ ಬಡವರ ಮನೆಯ ಕೊಣೆಯಿಂದಲೂ ಹುಟ್ಟಿದ ಕೂಸಲ್ಲ. ಅದೊಂದು ಸಂದರ್ಭ. ಅದನ್ನೂ ಬಂಡವಾಳವಾಗಿಸಿಕೊಳ್ಳುವ ಈ ಸುಸಂಸ್ಕೃತ ಜಗತ್ತಿನ ಮುಖವಾಡಗಳ ತುಂಬಾ ಅಳಿಸಿಹೋಗುವ ಬಣ್ಣಗಳಿವೆ.

****

ಬಹಳ ವಿಚಿತ್ರವೆಂದರೆ ಹಾಗೆ ಒಮ್ಮೆ ಸೋತು ಗೆದ್ದವನು ಮತ್ತೆ ಸೋಲುವ ಪ್ರಸಂಗಗಳು ಅತಿ ವಿರಳ. ಅದೊಂದು ತರಹ ವರ್ಷವೀಡಿ ಸುಖವಾಗಿದ್ದು, ವಾರವೊಂದರ ಕಾಲ ಜ್ವರ ಪೀಡಿತರಾಗಿ ರಿಫ್ರೇಶ್ ಆದಂತೆ. ಸೋಲು ಆತನ್ನು ಗೆಲುವಿಗಾಗಿ ಅಷ್ಟೊಂದು ತಹತಹಿಸುವಂತೆ ಮಾಡಿರುತ್ತದೆ. ಆ ಸೋಲು ಎಂದೂ ಆರದ ಒಂದಿಷ್ಟು ಗಾಯಗಳನ್ನು ಶಾಶ್ವತವಾಗಿ ನಮ್ಮೊಂದಿಗೆ ಬಿಟ್ಟು ಹೋಗಿರುತ್ತದೆ.

***

ಹೀಗೆ ಆನಾಯಾಚಿತವಾಗಿ ಬರುವ ಸೋಲನ್ನು ಹೀಗೀಗೇ ಗೆಲ್ಲಬೇಕು ಎಂದು ಹೇಳಿಕೊಡಲು ಅಸಾಧ್ಯವೇ. ಆದರೆ, ಮನಿ ಮ್ಯಾನೇಜ್‌ಮೆಂಟ್(ಹಣಕಾಸು ನಿರ್ವಹಣೆ) ವಿಚಾರದಲ್ಲಿ ಮಾತ್ರ ಸೋಲನ್ನು ಒಂದಿಷ್ಟು ನಿರೋಧಿಸಬಹುದು. ಅದು ಈ ಸೋಲಿಗೆ ಇರುವ ಏಕೈಕ ಗುಳಿಗೆ. ಗಳಿಕೆಯಲ್ಲಿ ಕೂಡಿಡುವ ಕಾಗುಣಿತ ಗೊತ್ತಿದ್ದರೆ,ಅದು ಸುಲಭ. ಎಲ್ಲದಕ್ಕಿಂತ ಮುಖ್ಯವಾಗಿ ಹಣ ಕೊಟ್ಟರೆ ಇಂತಿಷ್ಟೆ ಸಮಯಕ್ಕೆ ಹಿಂತಿರುಗಿ ಕೊಡಬೇಕು ಎನ್ನುವ ಗೆಳೆಯರನ್ನು ಸಾಧ್ಯವಾದಷ್ಟು ದೂರವಿಡಿ. ಅದು ಅವರವರ ಹಣಕಾಸು ಶಿಸ್ತು ಇರಬಹುದು. ಒಂದು ಪಕ್ಷ ನಿಮಗೆ ಇಂತಹ ಸೋಲು ಬೆನ್ನತ್ತಿದರೆ, ನಿಮ್ಮ ಆ ಶಿಸ್ತಿನ ಗೆಳೆಯರೆಲ್ಲಾ ಕಂಡವರ ದುಡ್ಡಿನಲ್ಲಿ ಟೀ ಕುಡಿಯುತ್ತಾ ಸಂಜೆ ರಸಗಳಿಗೆ ಕಳೆಯಲು ನಿಮನ್ನು ಬೇಕಾರ್ ಮಾಡುತ್ತಾರೆ. ಹಣಕಾಸು ವಿಚಾರದಲ್ಲಿ ನಾವೇಷ್ಟು ಶಿಸ್ತು ಬದ್ಧರು ಎಂಬುದನ್ನು ಇನ್ನೊಬ್ಬರಿಗೆ ತೋರಿಸಿಕೊಳ್ಳುವ ಆತುರದಲ್ಲಿ ನಿಮ್ಮನ್ನು ಹಾಗೂ ಮನುಷ್ಯತ್ವವನ್ನು ಹಣದ ಅಳತೆಯಂತೆ ತಕ್ಕಡಿಯಲ್ಲಿ ತೂಕಕ್ಕಿಟ್ಟು ಪಕಪಕನೆ ನಗುತ್ತಾ ಕಾಲೆಳೇಯುತ್ತಾರೆ.

****

ಎಲ್ಲದಕ್ಕಿಂತ ನೀವು ನಿಮ್ಮೊಳಗೆ ಉಳಿದುಕೊಳ್ಳಲು ಯತ್ನಿಸಿ.ಇಂತಹ ಒಂದು ಸೋಲು ಜೀವನದ ಪಾಠ ಎಂದುಕೊಳ್ಳಿ, ಜೀವನದಲ್ಲಿ ಓದಿ ಮುಗಿಸಬೇಕಾದ ಎಷ್ಟೋ ಪಾಠಗಳು ಬಾಕಿ ಉಳಿದಿವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ, ಯಾರೋ ನಾಲ್ವರು ನಿಮಗೆ ಮಾಡಿದ ಅವಮಾನ ನಿಮ್ಮ ಜೀವಕ್ಕಿಂತ ದೊಡ್ಡದಲ್ಲ. ಅಥವಾ ಮಾಡಿದ ಸಾಲ, ತೀರಿಸಲು ಅಸಾಧ್ಯವಾದ ಋಣವೂ ಅಲ್ಲ. ಅದೊಂದು ಲೆಕ್ಕಾಚಾರ. ಆದರೆ, ಸೋಲು,ಗೆಲವು, ಸುಖ,ದುಃಖ, ಕಳೆಯುವುದು,ಗಳಿಸುವುದು ಈ ಎಲ್ಲ ಕಾಗುಣಿತಕ್ಕಿಂತ ನಿಮ್ಮ ಜೀವ ದೊಡ್ಡದು ಎಂಬುದು ಮಾತ್ರ ಸದಾ ನೆನಪಿರಲಿ.ನೀವಿದ್ದರೇ ಇಂತಹ ಮತ್ತೊಂದು ಲೋಕ ಸೃಷ್ಟಿ ಮಾಡಲೂಬಹುದು ಎಂಬ ಅರಿವೂ ನಿಮ್ಮಲ್ಲಿ ಇರಲಿ.

ಸೋಲು ಮತ್ತು ಸಾಲಗಳ ಬಗ್ಗೆ ಮಾತುಕತೆ ಆರಂಭ ಮಾಡಿದ್ದು ಬೇಸರವಾದರೆ ಕ್ಷಮೆ ಇರಲಿ.ಆದರೆ, ಬದುಕಿನ ಪ್ರಮುಖ ಘಟ್ಟದಲ್ಲಿ ಹಾದು ಬಂದಿರುವ ಎಲ್ಲರು ಅದರಿಂದ ಹೊರತಾಗಿಯೂ ಹೊಸ ಬದುಕು ಆರಂಭಿಸಿರುತ್ತಾರೆ. ಅದು ಅವರ ಗೆಲವಿನ ಹೊಸ ಮೆಟ್ಟಿಲು..ಇದು ನನ್ನ ನಿಮ್ಮ ಮಾತುಕತೆಯ ಹೊಸಕಟ್ಟೆಯಾಗಲಿ ಎಂದುಕೊಳ್ಳೊಣ್ಣ..

ಕಾಲ ಮತ್ತೊಮ್ಮೆ ನಮಗಾಗಿ ಬಂತು..

2 comments:

desimaatu said...

ಬ್ಲಾಗ್ ಪ್ರಪಂಚಕ್ಕೆ ಹೆಗ್ಗೆರೆ ರೇಣುಕಾರಾಧ್ಯರಿಗೆ ಸ್ವಾಗತ.
ಶುಭವಾಗಲಿ.

arvikumar said...

yarneenu