Tuesday, June 9, 2009

ಕೂಗಿ ಹೇಳು..!

ನಾನು ಬರೆಯುವ ಕವನ
ಹೇಂಗಿರಬೇಕು..?
ಕೊನೆಯ ಕೇರಿ ಹುಡುಗನ ಪ್ರಶ್ನೆ.

ಮೂರ್ಖ,
ಜನಿವಾರವಿದ್ದರೇ
ಸಾಕು ಕವನ ಏಕೆ ಬರೆಯುತ್ತೀಯಾ !
ನೀನು ಬರೆದಿದ್ದೇಲ್ಲಾ ಕವನವೇ..!?
ನೀನು ಮಾತನಾಡಿದ್ದೆಲ್ಲಾ ಸಿದ್ದಾಂತವೇ..!
ನಿನ್ನ ಹೆಸರಿನ ಮುಂದೆ
ಮೇಲ್ಜಾತಿಯ
ನಾಮ ಸೂಚಕ ಒಂದಿದ್ದರೇ ಸಾಕು
ನಿನಗೆ ಹೋದಡೆಯಲ್ಲಾ ಕೆಂಪುಹಾಸು
ಇವ ನಮ್ಮವ ಇವ ನಮ್ಮವ
ಎಂದೆಲ್ಲಾ ಬಿಗಿದಪ್ಪುತ್ತದೆ
ನಿಮ್ಮ ಜನರನ್ನೇ ತುಳಿದ ಅವರ ಗುಂಪು..!

ಕೇಳೋ ಹುಡುಗ
ನಿಮ್ಮ ತಲೆಮಾರು ಹೊಸೆದ
ಹಾಡುಗಳನ್ನೆ ನಮ್ಮವೆಂದು
ಹಾಡಿ ಬೀಗಿದ ಮಂದಿ ಅವರು,
ಲಜ್ಜೆ ಬಿಟ್ಟು, ಜಾತಿ ಇಟ್ಟುಕೊಂಡು
ಜನಿವಾರಕಷ್ಟೇ ಜಾಗವಿಲ್ಲಿ
ಎಂದು ಹೇಳುತ್ತಲೇ
ದುಡಿಯುವ ನಿಮ್ಮ ಮಂದಿಗೊಂದು
ಕೇರಿ ಮಾಡಿದರು.
ಮೈಕೈ ನೋಯಿಸಿಕೊಳ್ಳದೆ
ಮಡಿ ಎಂದು
ಕಪ್ಪು ಜನರ ಕೆಂಪು ರಕ್ತ
ಗಟಗಟನೆ ಕುಡಿದು
ತಪ್ಪೆಲ್ಲಾ ನಿಮ್ಮ ಮೂತಿಗೆ ಒರೆಸಿದರು.

ಈಗೇನು ಮಾಡುತ್ತಿದ್ದಾರೆ..!
ಕಂಡಲ್ಲಿ..ಸಿಕ್ಕಲ್ಲಿ..ಬರೆದಲ್ಲಿ..ಬೆಳೆದಲ್ಲಿ
ನಿಮ್ಮನ್ನು ತುಳಿಯುವ ಸಂಗತಿ ಜಾರಿಯಲ್ಲಿದೆ!?

ಈಗಲಾರದೂ ಗಟ್ಟಿಯಾಗಿ
ಓದಿ ಹೇಳು
ನೀವು ಕದ್ದ, ಕಸಿದುಕೊಂಡ
ಹಾಡುಗಳೆಲ್ಲಾ ನಮ್ಮವೆಂದು
ನಮ್ಮ ಬೆವರಿನ ನಂತರ ಹುಟ್ಟಿದ
ಅಂತಃಕರಣದ ರಾಗಗಳೆಂದು..
ನಮಗೆ ನಾವೇ
ಕವಿಗಳೇಂದು..!?

-ಹೆಗ್ಗೆರೆ ರೇಣುಕಾರಾಧ್ಯ
ಮೈಸೂರು.

No comments: